ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ
*ಮೂಲಂಗಿ*
ಅಗ್ಗವಾಗಿ ಸಿಗುವ ಯಾವ ವಸ್ತುಗಳೂ ನಮಗೆ ಅಮೂಲ್ಯವಲ್ಲ! ಆಹಾರದ ವಿಷಯದಲ್ಲಂತೂ ಈ ಮಾತು ಮೂಲಂಗಿಗೆ ಸ್ಪಷ್ಟವಾಗಿ ಅನ್ವಯಿಸುತ್ತದೆ. ವಾಸ್ತವದಲ್ಲಿ ಮೂಲಂಗಿ ಪೊಟ್ಯಾಶಿಯಂ, ವಿಟಮಿನ್ ಸಿ ಮತ್ತು ಕರಗುವ ಮತ್ತು ಕರಗದ ನಾರಿನಂಶದ ಸಮೃದ್ಧ ಮೂಲವಾಗಿದೆ. ಇನ್ನೂ ಒಳ್ಳೆಯ ಅಂಶವೆಂದರೆ ಇದನ್ನು ಹಸಿಯಾಗಿಯೂ ಬೇಯಿಸಿಯೂ ಸೇವಿಸಬಹುದು
ತರಕಾರಿಗಳಲ್ಲಿ ಕೆಲವು ಮಾತ್ರವೇ ಹಸಿಯಾಗಿಯೂ ಸೇವಿಸಬಹುದಾದ ಮತ್ತು ಬೇಯಿಸಿಯೂ ಸೇವಿಸಬಹುದಾಗಿವೆ. ಕ್ಯಾರೆಟ್, ಎಲೆಕೋಸು, ಟೊಮಾಟೋ ಹಾಗೂ ಮೂಲಂಗಿ ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಸಾಲಾಡ್ ಒದಗಿಸುವ ತಟ್ಟೆಯಲ್ಲಿ ಇತರ ತರಕಾರಿಗಳು, ಸೌತೆಕಾಯಿ ಮೊದಲಾದವುಗಳಿದ್ದರೂ ಮೂಲಂಗಿ ಏಕೆ ಇರುವುದಿಲ್ಲ? ಕಾರಣ, ಮೂಲಂಗಿಯ ಬಗ್ಗೆ ನಮ್ಮಲ್ಲಿ ಹೆಚ್ಚಿನವರಿಗೆ ಇರುವ ಅಸಡ್ಡೆ. ಇದು ಅಗ್ಗವಾಗಿ ದೊರಕುತ್ತದೆ ಎಂಬ ಕಾರಣಕ್ಕೇ ಹೆಚ್ಚಿನವರ ಅಸಡ್ಡೆಗೆ ಗುರಿಯಾಗಿದೆ. ವಾಸ್ತವದಲ್ಲಿ, ಮೂಲಂಗಿ ಒಂದು ಅದ್ಭುತವಾದ ಆರೋಗ್ಯಕರ ತರಕಾರಿಯಾಗಿದೆ.
ಮೂಲಂಗಿ ಬಣ್ಣ
ಮೂಲಂಗಿ ಸಾಮಾನ್ಯವಾಗಿ ಬಿಳಿ ಬಣ್ಣದಲ್ಲಿದ್ದರೂ ಇತರ ಬಣ್ಣಗಳಲ್ಲಿಯೂ ದೊರಕುತ್ತದೆ. ಕೆಂಪು, ಹಳದಿ, ನೇರಳೆ, ಬಿಳಿ-ಕೆಂಪು ಮಿಶ್ರಿತ ಬಣ್ಣ, ಹಸಿರು ಮೊದಲಾದ ಬಣ್ಣಗಳಲ್ಲಿ ದೊರಕುತ್ತದೆ. Daikon ಎಂಬ ತಳಿಯ ಬಿಳಿ ಮೂಲಂಗಿ ಸಾಮಾನ್ಯವಾಗಿ ಉದ್ದ ಮತ್ತು ದೊಡ್ಡದಾಗಿದ್ದರೆ ಉಳಿದವು ಚಿಕ್ಕ ಬೀಟ್ರೂಟಿನ ಆಕಾರದಲ್ಲಿರುತ್ತವೆ. ಅಪರೂಪಕ್ಕೆ ಕಪ್ಪು ಬಣ್ಣಕ್ಕೆ ಅತಿ ಹತ್ತಿರವಾಗಿರುವ ಗಾಢನೀಲಿ ಬಣ್ಣದ ಮೂಲಂಗಿಗಳೂ ದೊರಕುತ್ತವೆ. ಇದರ ರುಚಿ ಕೊಂಚವೇ ಖಾರವಾಗಿರುವ ಕಾರಣ ಹಲವರಿಗೆ ಇದು ಹಿಡಿಸುವುದಿಲ್ಲ. ಆದರೆ ಇದರಲ್ಲಿರುವ ಅದ್ಭುತವಾದ ಆರೋಗ್ಯಕರ ಗುಣಗಳು ಮಾತ್ರ ಈ ತರಕಾರಿಯನ್ನು ಅತಿ ಮಹತ್ವದ್ದಾಗಿಸುತ್ತದೆ.
ಮೂಲಂಗಿಯ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ. ಉದಾಹರಣೆಗೆ ಯಕೃತ್ ಮತ್ತು ಜಠರದ ಕಲ್ಮಶಗಳನ್ನು ನಿವಾರಿಸುವ ಮೂಲಕ ಈ ಅಂಗಗಳನ್ನು ಸ್ವಚ್ಛತೆಗೊಳಿಸುತ್ತದೆ. ಕಾಮಾಲೆ ಅಥವಾ ಹಳದಿ ರೋಗ (ಜಾಂಡೀಸ್) ಎದುರಾದರೆ ಕಪ್ಪು ಮೂಲಂಗಿಯ ರಸವನ್ನು ಕುಡಿಸುವುದು, ಇದರ ಎಲೆ ಮತ್ತು ತರಕಾರಿಯನ್ನು ತಿನ್ನಿಸುವುದು ಭಾರತದಲ್ಲಿ ಬಹಳ ಹಿಂದಿನಿಂದ ನಡೆದುಬಂದ ಚಿಕಿತ್ಸಾ ಕ್ರಮವಾಗಿದೆ. ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಹಳದಿ ಬಣ್ಣ ಬರಲು ಕಾರಣವಾಗಿರುವ ಹೆಚ್ಚಿನ ಪ್ರಮಾಣದ ಬಿಲಿರುಬಿನ್ (bilirubin) ಎಂಬ ರಾಸಾಯನಿಕವನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ರಕ್ತ ಶುದ್ಧೀಕರಣಗೊಳಿಸಲು, ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಉಡುಗಿಸುವುದನ್ನು (ಹೈಪೋಥೈರಾಯ್ಡಿಸಂ) ಸರಿಪಡಿಸುವುದು ಸಹಾ ಮೂಲಂಗಿಯ ಇನ್ನೊಂದು ಹೆಗ್ಗಳಿಕೆಯಾಗಿದೆ. ಇದರಲ್ಲಿರುವ ಗಂಧಕದ ಅಂಶವೇ ಈ ಗುಣಕ್ಕೆ ಕಾರಣವಾಗಿದೆ.
ಕೆಂಪು ರಕ್ತಕಣಗಳನ್ನು ರಕ್ಷಿಸುತ್ತದೆ
ನಮ್ಮ ರಕ್ತದಲ್ಲಿರುವ ಕೆಂಪು ರಕ್ತಕಣಗಳಿಗೆ ಎದುರಾಗುವ ಘಾಸಿಯನ್ನು ನಿಯಂತ್ರಿಸಿ ಕಣಗಳ ನಷ್ಟವಾಗುವಿಕೆಯಿಂದ ತಡೆಯುತ್ತದೆ. ತನ್ಮೂಲಕ ರಕ್ತದ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಅಧಿಕವಾದ ಕರಗುವ ಮತ್ತು ಕರಗದ ನಾರಿನಂಶ
ಮೂಲಂಗಿಯನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ನೀವು ಅದನ್ನು ಸೇವಿಸುತ್ತಿದ್ದರೆ, ನಿಮಗೆ ಜೀರ್ಣಕ್ರಿಯೆಯ ಅಥವಾ ಮಲಬದ್ದತೆಯ ತೊಂದರೆ ಎದುರಾಗದು. ಏಕೆಂದರೆ ಇದರಲ್ಲಿ ಸಮೃದ್ದ ಪ್ರಮಾಣದಲ್ಲಿ ಕರಗುವ ಮತ್ತು ಕರಗದ ನಾರಿನಂಶಗಳಿವೆ. ಇವು ಜೀರ್ಣಕ್ರಿಯೆಯನ್ನು ಸುಲಭಗೊಳಿಸುವ ಜೊತೆಗೇ ಪಿತ್ತರಸದ ಉತ್ಪಾದನೆಯನ್ನು ನಿಯಂತಿಸುವ ಮೂಲಕ ಯಕೃತ್ ಮತ್ತು ಪಿತ್ತಕೋಶಗಳನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಈ ನಾರಿನಂಶಗಳು ಜೀರ್ಣಾಂಗದಲ್ಲಿ ಸಾಕಷ್ಟು ನೀರಿನಂಶವನ್ನು ಉಳಿಸಿಕೊಂಡು ಮಲಬದ್ದತೆಯಾಗದಂತೆ ತಡೆಯುತ್ತವೆ.
ಹೃದಯವನ್ನು ರಕ್ಷಿಸುತ್ತದೆ
ಮೂಲಂಗಿಗಳಲ್ಲಿ ಉತ್ತಮ ಪ್ರಮಾಣದ ಆಂಥೋಸೈಯಾನಿನ್ (anthocyanins) ಗಳಿವೆ. ಇವು ಹೃದಯದ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿರಲು ನೆರವಾಗುತ್ತವೆ. ತನ್ಮೂಲಕ ಹೃದಯಸಂಬಂಧಿ ಕಾಯಿಲೆಗಳಿಂದ ರಕ್ಷಿಸುತ್ತವೆ. ಇದರಲ್ಲಿರುವ ಅಧಿಕ ಪ್ರಮಾಣದ ವಿಟಮಿನ್ ಸಿ, ಫೋಲಿಕ್ ಆಮ್ಲ ಮತ್ತು ಫ್ಲೇವನಾಯ್ಡುಗಳೂ ಹೃದಯದ ಆರೋಗ್ಯವನ್ನು ವೃದ್ದಿಸುತ್ತವೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಮೂಲಂಗಿ ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಸಹ ಒದಗಿಸುತ್ತದೆ, ಇದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ರಕ್ತದ ಪರಿಚಲನೆಯನ್ನು ನಿಯಂತ್ರಣದಲ್ಲಿ ಇರಿಸುತ್ತದೆ, ವಿಶೇಷವಾಗಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮೂಲಂಗಿ ನಿಮಗೆ ಅಗತ್ಯವಾದ ಆಹಾರವಾಗಿದೆ.. ಆಯುರ್ವೇದದ ಪ್ರಕಾರ, ಮೂಲಂಗಿಯು ರಕ್ತವನ್ನು ತಂಪುಗೊಳಿಸುವ ಪರಿಣಾಮವನ್ನು ಬೀರುತ್ತದೆ.
ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ
ಮೂಲಂಗಿಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಸಿ ಇರುವ ಕಾರಣದಿಂದ ಇದು ನೆಗಡಿ ಮತ್ತು ಕೆಮ್ಮು ಎದುರಾಗುವುದನ್ನು ರಕ್ಷಿಸುತ್ತದೆ ಮತ್ತು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ. ಆದರೆ ನೀವು ಇದನ್ನು ನಿಯಮಿತವಾಗಿ ಸೇವಿಸಬೇಕು. ಇದು ಹಾನಿಕಾರಕ ಫ್ರೀ ರ್ಯಾಡಿಕಲ್ ಅಂಬ ಕಣಗಳು, ಉರಿಯೂತ ಎದುರಾಗುವಿಕೆ ಮತ್ತು ಆರಂಭಿಕ ವಯಸ್ಸಾಗುವಿಕೆಯನ್ನೂ ನಿಯಂತ್ರಿಸುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.
ರಕ್ತನಾಳಗಳನ್ನು ಬಲಪಡಿಸುತ್ತದೆ
ಮೂಲಂಗಿಯ ಪ್ರಯೋಜನಗಳಲ್ಲಿಯೇ ಇದು ಮುಖ್ಯವಾಗಿದೆ. ರಕ್ತನಾಳಗಳನ್ನು ಬಲಪಡಿಸುವ ಅಂಗಾಶವಾದ ಕೊಲ್ಯಾಜೆನ್ (collagen) ಉತ್ಪಾದನೆಯಲ್ಲಿ ಮೂಲಂಗಿ ಪ್ರಮುಖ ಪಾತ್ರ ವಹಿಸುತ್ತದೆ, ಇದು ನಮ್ಮ ರಕ್ತನಾಳಗಳನ್ನು ಬಲಪಡಿಸುತದೆ ಮತ್ತು ಅಪಧಮನಿಕಾಠಿಣ್ಯ ಅಥವಾ ರಕ್ತನಾಳಗಳು ಪೆಡಸಾಗುವ ತೊಂದರೆಯ (atherosclerosis) ಸಾಧ್ಯತೆಯನ್ನೂ ಕಡಿಮೆ ಮಾಡುತ್ತದೆ.
ಜೀವ ರಾಸಾಯನಿಕ ಕ್ರಿಯೆಯನ್ನು ಬೆಂಬಲಿಸುತ್ತದೆ
ಈ ತರಕಾರಿಯ ಸೇವನೆಯಿಂದ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಂಡು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಮಾತ್ರವಲ್ಲ, ಆಮ್ಲೀಯತೆ, ಸ್ಥೂಲಕಾಯ, ವಾಯುಪ್ರಕೋಪ ಸಮಸ್ಯೆಗಳು ಮತ್ತು ವಾಕರಿಕೆಗಳನ್ನು ಸರಿಪಡಿಸಲೂ ಸಹ ಸಹಾಯ ಮಾಡುತ್ತದೆ.
ಪೋಷಕಾಂಶಗಳಿಂದ ಸಮೃದ್ಧವಾಗಿದೆ
ಕೆಂಪು ಮೂಲಂಗಿಗಳಲ್ಲಿ ವಿಟಮಿನ್ ಇ, ಎ, ಸಿ, ಬಿ 6, ಮತ್ತು ಕೆ ಸಮೃದ್ಧವಾಗಿವೆ. ಪ್ರತಿಯೊಂದು ಪೋಷಕಾಂಶವೂ ನಮ್ಮ ದೇಹಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ಪ್ರಯೋಜನಕಾರಿಯಾಗಿವೆ.
ತ್ವಚೆಯನ್ನೂ ಉತ್ತಮಗೊಳಿಸುತ್ತದೆ
ನೀವು ಪ್ರತಿದಿನ ಮೂಲಂಗಿ ರಸವನ್ನು ಕುಡಿಯುವ ಅಭ್ಯಾಸ ಹೊಂದಿದ್ದರೆ ಇದು ತ್ವಚೆಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡುತ್ತದೆ ಹಾಗೂ ಅಗತ್ಯ ಪೋಷಕಾಂಶಗಳಾದ ವಿಟಮಿನ್ ಸಿ, ಸತು ಮತ್ತು ರಂಜಕಗಳನ್ನು ಒದಗಿಸುತ್ತದೆ. ಜೊತೆಗೆ ಇದು ಚರ್ಮ ಒಣಗುವಿಕೆ, ಮೊಡವೆ, ಕೀವುಗುಳ್ಳೆಗಳನ್ನು ಮತ್ತು ದದ್ದುಗಳು ಎದುರಾಗದೇ ಇರುವಂತೆ ಕಾಪಾಡುತ್ತದೆ. ನಿಮ್ಮ ಮುಖವನ್ನು ಶುದ್ಧೀಕರಿಸಲು ನೀವು ಮೂಲಂಗಿಯನ್ನು ಅರೆದು ತಯಾರಿಸಿದ ಲೇಪವನ್ನೂ ತ್ವಚೆಗೆ ಹಚ್ಚಿಕೊಳ್ಳಬಹುದು. ಮತ್ತು ನೀವು ಇದನ್ನು ನಿಮ್ಮ ಕೂದಲಿಗೆ ಹಚ್ಚಿದರೆ, ಇದು ತಲೆಹೊಟ್ಟನ್ನು ನಿವಾರಿಸಲು, ಕೂದಲು ಉದುರುವುದನ್ನು ತಡೆಯಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕೂದಲ ಬುಡಗಳಿಗೂ ಇಳಿದು ಕೂದಲ ಬುಡಗಳನ್ನು ದೃಢಗೊಳಿಸುವ ಮೂಲಕ ಕೂದಲ ಉದುರುವಿಕೆಯನ್ನು ತಡೆಯುತ್ತದೆ.
ನಿರ್ಜಲೀಕರಣದಿಂದ ರಕ್ಷಿಸುತ್ತದೆ
ವಿಶೇಷವಾಗಿ ಬೇಸಿಗೆಯಲ್ಲಿ ತ್ವಚೆಯಿಂದ ಹೆಚ್ಚಿನ ನೀರಿನಂಶ ನಷ್ಟವಾಗುತ್ತಿದ್ದಾಗ, ದೇಹಕ್ಕೆ ಹೆಚ್ಚಿನ ನೀರಿನಂಶ ನೀಡುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಜಾಣತನ. ಮೂಲಂಗಿ ಇಂತಹ ಒಂದು ಆಹಾರವಾಗಿದ್ದು ಇದರಲ್ಲಿರುವ ಸಮೃದ್ಧವಾದ ನೀರಿನಂಶ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯುತ್ತದೆ.
*ಶರಣು ಶರಣಾರ್ಥಿಗಳು🌱🙏*
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು , ಸಧ್ಯದಲ್ಲೇ ಪ್ರತಿಕ್ರಿಯೆ ನೀಡಲಾಗುತ್ತದೆ.🙏